‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್​ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಅವರನ್ನು ಭೇಟಿ ಆಗಬೇಕು ಎಂಬುದು ಅನೇಕರ ಬಯಕೆ. ಆ ಉದ್ದೇಶದಿಂದ ಹಲವರು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಕಾಯುತ್ತಿದ್ದಾರೆ. ಆದರೆ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ದರ್ಶನ್​ ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ. ದರ್ಶನ್​ ಅಭಿಮಾನಿ ಆಗಿರುವ ಸುನಿಲ್​ ಎಂಬ ಆಟೋ ಚಾಲಕ ಇಂದು (ಜೂನ್​ 30) ಜೈಲಿನ ಎದುರು ನಿಂತು ಕಾದಿದ್ದಾರೆ. ‘ನಮಗೆ ಕಷ್ಟ ಇದ್ದಾಗ ನಾವು ಅವರ ಮನೆಗೆ ಹೋಗುತ್ತೇವೆ. ಅದೇ ರೀತಿ, ಅವರಿಗೆ ಕಷ್ಟ ಆದಾಗ ನಾವು ಅವರ ಜೊತೆಯಲ್ಲಿ ನಿಲ್ಲಬೇಕು. ದರ್ಶನ್ ಅವರನ್ನು ನೋಡಿದರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ. ನಮ್ಮ ಬಾಸ್​ನ ನೋಡಿದ್ವಿ ಎನ್ನುವ ಖುಷಿಯಲ್ಲಿ ಕೆಲಸ ಮಾಡುತ್ತೇವೆ. ನಾನು ಮಾರತ್ತಹಳ್ಳಿಯಿಂದ ಬಂದಿದ್ದೇನೆ. ತುಂಬ ಬೇಸರ ಆಗಿದೆ. ಇಲ್ಲಿಗೆ ಬರುವ ಅಭಿಮಾನಿಗಳು ಯಾರಿಗೂ ತೊಂದರೆ ಕೊಡಬಾರದು. ಅನೇಕರಿಗೆ ಬಾಸ್​ ಸಹಾಯ ಮಾಡಿದ್ದಾರೆ. ಯಾರದ್ದೇ ತಪ್ಪು ಇದ್ದರೂ ಶಿಕ್ಷೆ ಆಗಲಿ. ಬಾಸ್​ ಹೊರಗೆ ಬಂದಮೇಲೆ ಒಳ್ಳೆಯ ಕೆಲಸ ಮುಂದುವರಿಸಲಿ’ ಎಂದು ಸುನಿಲ್​ ಹೇಳಿದ್ದಾರೆ.