ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು : ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ವಾಗ್ದಾಳಿ

ಧಾರವಾಡ : ಗ್ಯಾರಂಟಿ ಭರವಸೆ ವಿಚಾರದಲ್ಲಿ ನಿರಂತರವಾಗಿ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಸುಳ್ಳು ಎರಡೂ ಸಹ ಒಂದೇ ನಾಣ್ಯದ ಎರಡು ಮುಖಗಳು ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ವಿಚಾರದಲ್ಲಿ ಸುಳ್ಯ ಹೇಳೋದನ್ನ ಕಾಂಗ್ರೆಸ್ ಪಕ್ಷ ತನ್ನ ಜನ್ಮಸಿದ್ಧ ಹಕ್ಕು ಅಂತ ಭಾವಿಸಿದೆ. ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಆದರೆ ಅದು ಸುಳ್ಳು ಅಂತ ನಾವು ಮತ್ತೆ ಮತ್ತೆ ಹೇಳಿದ್ವಿ. ಅಕ್ಕಿ ಕೊಡ್ತಿರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂತ ಜನರಿಗೂ ಸಹ ತಿಳಿದಿತ್ತು. ದೇಶಾದ್ಯಂತ ಒಟ್ಟು 80 ಕೋಟಿ ಜನರಿಗೆ ತಲಾ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಜನರ ದಾರಿ ತಪ್ಪಿಸಲು ಯುಪಿಎ ಸರ್ಕಾರದ ಕಾಲದಲ್ಲಿ ಕಾಯ್ದೆ ಜಾರಿಗೆ ಬಂತು ಅಂತಿದ್ರು. ಆದರೆ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಗೆ ಕನಿಷ್ಠ ಕಾನೂನುಗಳನ್ನೂ ರೂಪಿಸಿರಲಿಲ್ಲ. ಕಾಯ್ದೆ ಕೇವಲ ಪೇಪರ್ ಮೇಲಷ್ಟೇ ಇತ್ತು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಆಹಾರ ಭದ್ರತಾ ಕಾಯ್ದೆಯನ್ನು ಸರಿಪಡಿಸಿ, ಅದಕ್ಕೆ ಕಾನೂನುಗಳನ್ನು ರೂಪಿಸಿ ಜಾರಿ ಮಾಡಿದರು.