ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಆದರೆ ಎಲ್ಲರಿಗೂ ಚಾನ್ಸ್ ಸಿಗುವುದಿಲ್ಲ. ಅವಕಾಶಕ್ಕಾಗಿ ಕೆಲವರು ಹಲವಾರು ಬಗೆಯ ಸರ್ಕಸ್ ಮಾಡುತ್ತಾರೆ. ವಿವಿಧ ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಈಗ ವ್ಯಕ್ತಿಯೊಬ್ಬರು ಎತ್ತಿನ ಗಾಡಿನಲ್ಲಿ ಬೆಂಗಳೂರಿಗೆ ಬಂದು ಕಿಚ್ಚ ಸುದೀಪ್ ಅವರ ಮನೆಯ ಎದುರಿನಲ್ಲಿ ಹೈಡ್ರಾಮಾ ಮಾಡಿದ್ದಾರೆ. ‘ನಮ್ಮ ನಡಿಗೆ ಬಿಗ್ ಬಾಸ್ ಕಡೆಗೆ. ಅವಿದ್ಯಾವಂತ ರೈತರಿಗೆ ಒಂದು ಅವಕಾಶ ಕೊಡಿ’ ಎಂಬ ಬ್ಯಾನರ್ ಅನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಅವರು ಬಂದಿದ್ದಾರೆ. ತಾವು ಟಿ. ನರಸೀಪುರದಿಂದ ಬಂದಿರುವುದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸುದೀಪ್ ಮನೆಯ ಭದ್ರತಾ ಸಿಬ್ಬಂದಿ ಈ ರೈತನಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.