ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ

ಕೊಲೆ ಪ್ರಕರಣದ ಆರೋಪಿಯಾಗಿ ದರ್ಶನ್​ ಅವರು ಜೈಲು ಸೇರಿರುವುದರಿಂದ ಅವರ ಕುಟುಂಬದವರಿಗೆ ತೀವ್ರ ನೋವಾಗಿದೆ. ಇಂದು (ಜುಲೈ 1) ದರ್ಶನ್​ ತಾಯಿ ಮೀನಾ, ಸಹೋದರ ದಿನಕರ್ ತೂಗುದೀಪ, ಮಗ ವಿನೀಶ್​, ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಬಂದಿದ್ದಾರೆ. ದರ್ಶನ್​ ಅವರನ್ನು ನೋಡಿ ತಾಯಿ ಮೀನಾ ಅವರು ಕಣ್ಣೀರು ಹಾಕಿದ್ದಾರೆ. ತಾಯಿಯನ್ನು ನೋಡುತ್ತಿದ್ದಂತೆಯೇ ದರ್ಶನ್​ ಕೂಡ ಗಳಗಳನೆ ಅತ್ತಿದ್ದಾರೆ. ಬಳಿಕ ದರ್ಶನ್​ ಅವರು ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಸಿ, ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಸಾಯಿಸಿದ ಆರೋಪ ದರ್ಶನ್​ ಮೇಲಿದೆ. ನಟಿ ಪವಿತ್ರಾ ಗೌಡ ಹಾಗೂ ಸಹಚರರ ಮೇಲೂ ಆರೋಪ ಇದೆ. ಎಲ್ಲ ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.