Udupi News: ಶಿರ್ವದಲ್ಲಿ ಕಾಡುಕೋಣಗಳು ಪ್ರತ್ಯಕ್ಷ, ನಾಶವಾಗುತ್ತಿವೆ ಬೆಳೆಗಳು

ಉಡುಪಿ, ಜುಲೈ 30: ಜಿಲ್ಲೆಯ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ರವಿ ಕುಲಾಲ್ ಎಂಬುವವರಿಗೆ ಸೇರಿದ ಮನೆಯ ವರಾಂಡದಲ್ಲಿ ಕಾಡುಕೋಣಗಳು ಪತ್ತೆಯಾಗಿವೆ. ಮನೆಯ ಸುತ್ತಲೂ ತಿರುಗಿ ಬಾವಿ ಬಳಿ ತೆರಳಿ ನಂತರ ಕಾಡಿಗೆ ನುಗ್ಗಿವೆ. ಪಿಲಾರುಕಾನ ಮೀಸಲು ಅರಣ್ಯದ ಸುತ್ತ ಮುಳ್ಳುತಂತಿ ಬೇಲಿ ಇದ್ದರೂ ಕೆಲವೊಮ್ಮೆ ಕಾಡುಕೋಣಗಳ ಹಿಂಡು ಮೀಸಲು ಅರಣ್ಯದ ಅಂಚಿನಲ್ಲಿರುವ ಸೂಡ, ಪಿಲಾರು, ಮಜಲಬೆಟ್ಟು, ಮಿತ್ತಬೀಟು, ಕುದುರೆಬೆಟ್ಟು ಮತ್ತು ಗುಂಡುಪಾದೆ ಪ್ರದೇಶಗಳಲ್ಲಿನ ಕೃಷಿ ಜಮೀನುಗಳಿಗೆ ನುಗ್ಗಿ ಭತ್ತ, ತರಕಾರಿ, ಬಾಳೆ ಮತ್ತು ಅಡಿಕೆ ಕೃಷಿಯನ್ನು ನಾಶಗೊಳಿಸುತ್ತಿವೆ.