ದಾವಣಗೆರೆ: ಜನರ ನೆಮ್ಮದಿ ಹಾಳು ಮಾಡಿದ್ದ ‌ಚಿರತೆ ಕೊನೆಗೂ ಸೆರೆ

ದಾವಣಗೆರೆ, ಸೆ.8: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದ ಸುತ್ತಮುತ್ತಲಿನಲ್ಲಿ ಜನರ ನೆಮ್ಮದಿ ಹಾಳು ಮಾಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಕಳೆದ ಹಲವಾರು ದಿನಗಳಿಂದ ರೈತರ ಜಮೀನಿನಲ್ಲಿ ಚಿರತೆ ಸುತ್ತಾಡುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ, ವಾರದಿಂದ ಬೋನು ಇಟ್ಟು ಅದರಲ್ಲಿ ಶ್ವಾನವನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸದ್ಯ ಆಹಾರ ಅರಸುತ್ತಾ ಬಂದ ಚಿರತೆ ಶ್ವಾನ ತಿನ್ನಲು ಬೋನಿಗೆ ನುಗ್ಗಿ ಸೆರೆಯಾಗಿದೆ. ಇದರಿಂದಾಗಿ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.