ಕನ್ನಡ ಕಿರುತೆರೆಯ ಕಾಮಿಡಿ ನಟ ಚಂದ್ರಪ್ರಭ ಅವರು ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇತ್ತೀಚೆಗೆ ಅವರು ಚಿಕ್ಕಮಗಳೂರಿನಲ್ಲಿ ಕಾರು ಚಲಾಯಿಸುತ್ತಿದ್ದಾಗ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೆಪ್ಟೆಂಬರ್ 8) ಚಿಕ್ಕಮಗಳೂರಿನ ಸಂಚಾರ ಪೊಲೀಸ್ ಠಾಣೆಗೆ ಚಂದ್ರಪ್ರಭ ಹಾಜರಿ ಹಾಕಿದ್ದಾರೆ. ಈ ವೇಳೆ ‘ಟಿವಿ9 ಕನ್ನಡ’ ಜೊತೆ ಅವರು ಮಾತನಾಡಿದ್ದಾರೆ. ಅಪಘಾತ ನಡೆದ ಬಳಿಕ ಬೈಕ್ ಸವಾರನ ಮೇಲೆ ಚಂದ್ರಪ್ರಭ ಅವರು ಕೆಲವು ಆರೋಪಗಳನ್ನು ಮಾಡಿದ್ದರು. ಆ ವ್ಯಕ್ತಿ ಮದ್ಯಪಾನ ಮಾಡಿದ್ದರು ಎಂದು ಕೂಡ ಚಂದ್ರಪ್ರಭ ಆರೋಪಿಸಿದ್ದರು. ಆದರೆ ಆ ಹೇಳಿಕೆಯನ್ನು ಅವರೀಗ ಹಿಂದಕ್ಕೆ ಪಡೆದಿದ್ದಾರೆ. ‘ಯಾರೋ ಹೇಳಿದ್ರು ಅಂತ ನಾನು ಆ ರೀತಿ ಹೇಳಿಕೆ ನೀಡಿದ್ದೆ. ಈಗ ಕ್ಷಮೆ ಕೇಳಿದ್ದೇನೆ. ಆಸ್ಪತ್ರೆಗೆ ಹೋಗಿ ಅವರ ಆರೋಗ್ಯ ವಿಚಾರಿಸುತ್ತೇನೆ’ ಎಂದು ಚಂದ್ರಪ್ರಭ ಹೇಳಿದ್ದಾರೆ.