ಹಚ್ಚಹಸಿರಿನಿಂದ ಕಂಗೊಳಿಸುತ್ತಿರೋ ಅರಣ್ಯ ಪ್ರದೇಶ. ಕಾಡಿನ ಮಧ್ಯೆ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ನೀರು. ಜಲಪಾತವನ್ನ ವೀಕ್ಷಣೆ ಮಾಡುತ್ತಿರೋ ಪ್ರವಾಸಿಗರು. ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ. ಹೌದು ಕಬಿನಿ ಹಾಗೂ ಕೆಆರ್ಎಸ್ ಜಲಾಶಯದಿಂದ ಕಪಿಲಾ ಹಾಗೂ ಕಾವೇರಿ ನದಿಗೆ ನೀರನ್ನ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಗಗನಚುಚ್ಚಿ ಜಲಪಾತಕ್ಕೆ ಜೀವಕಳೆ ಬಂದಿದೆ. ಕೆಲವೇ ದಿನಗಳ ಕೆಳಗೆ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಜಲಪಾತ ಇದೀಗ ಧುಮ್ಮುಕ್ಕುತ್ತಿದೆ. ಹಾಲ್ನೋರೆಯಂತೆ ಮೇಲಿಂದ ಕೆಳಗೆ ಧುಮಕುವ ನೀರು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಸುತ್ತಲು ಅರಣ್ಯ ಪ್ರದೇಶ. ಅರಣ್ಯ ಪ್ರದೇಶದ ಮಧ್ಯೆ ಸುಂದರವಾಗಿ ಧುಮಕುತ್ತಿರೋ ಗಗನಚುಕ್ಕಿ ಜಲಪಾತವನ್ನ ನೋಡಲು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.