‘ಹರಹರ ಮಹದೇವ’ ಧಾರಾವಾಹಿಯಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರು ಒಟ್ಟಿಗೆ ನಟಿಸಿದ್ದರು. ಅವರಿಬ್ಬರೂ ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರ ನಡುವೆ ಮೊದಲಿನಿಂದಲೂ ವೈಮನಸ್ಸು ಮೂಡಿದೆ. ಈಗಂತೂ ಟಾಸ್ಕ್ ವಿಚಾರದಲ್ಲಿ ಅವರಿಬ್ಬರು ಕಿತ್ತಾಡಿಕೊಂಡಿದ್ದಾರೆ. ಮಾತಿನ ಚಕಮಕಿಯ ನಡುವೆ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಿಕೊಂಡಿದ್ದಾರೆ. ಇಬ್ಬರ ಜಗಳ ತಾರಕಕ್ಕೆ ಏರಿದೆ. ‘ನನ್ನ ಕೈ ಮುಟ್ಟಬೇಡ. ನಿನ್ನ ಯೋಗ್ಯತೆಗೆ’ಎಂದು ವಿನಯ್ ಕೂಗಾಡಿದ್ದಾರೆ. ‘ಮೊದಲು ನಿನ್ನ ಯೋಗ್ಯತೆ ನೋಡ್ಕೋ..’ ಎಂದು ಸಂಗೀತಾ ತಿರುಗೇಟು ನೀಡಿದ್ದಾರೆ. ಬಳೆ ತೊಟ್ಟುಕೊಳ್ಳುವುದನ್ನು ಅಸಮರ್ಥತೆಯ ಸಂಕೇತ ಎಂಬ ರೀತಿಯಲ್ಲಿ ವಿನಯ್ ಆಗಾಗ ಮಾತನಾಡಿದ್ದುಂಟು. ಅದಕ್ಕೂ ಸಂಗೀತಾ ಸಿಡಿಮಿಡಿಕೊಂಡಿದ್ದಾರೆ. ‘ಬಳೆ ಹಾಕಿಕೊಂಡಿದ್ದೇನೆ ನೋಡು’ ಎಂದು ಅವರು ಏರು ಧ್ವನಿಯಲ್ಲಿ ಜಗಳ ಮಾಡಿದ್ದಾರೆ. ಈ ಸಂಚಿಕೆ ನವೆಂಬರ್ 1ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ದಲ್ಲಿ 24 ಗಂಟೆಯೂ ಉಚಿತವಾಗಿ ನೋಡಬಹುದು.