ನಟ ವಿಜಯ್ ರಾಘವೇಂದ್ರ ಅವರು ಈಗ ನೋವಿನಲ್ಲಿದ್ದಾರೆ. ಅದರ ನಡುವೆಯೂ ಅವರು ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ‘ಕದ್ದ ಚಿತ್ರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 25ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸ್ಪಂದನಾ ವಿಜಯ್ ರಾಘವೇಂದ್ರ ಅವರ ನಿಧನದಿಂದ ಚಿತ್ರದ ರಿಲೀಸ್ ದಿನಾಂಕ ಮುಂದೆ ಹೋಯಿತು. ಈ ಸಿನಿಮಾದ ಸುದ್ದಿಗೋಷ್ಠಿ ಶನಿವಾರ (ಆಗಸ್ಟ್ 26) ನಡೆಯಿತು. ಈ ವೇಳೆ ವೇದಿಕೆಯಲ್ಲಿ ವಿಜಯ್ ರಾಘವೇಂದ್ರ ಮಾತನಾಡಿದರು. ಇತ್ತೀಚೆಗೆ ತಮ್ಮ ಜೀವನದ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತಿದ್ದ ಎಲ್ಲರನ್ನೂ ನೆನಪಿಸಿಕೊಂಡು ಅವರು ಭಾವುಕರಾದರು. ‘ನೀವೆಲ್ಲರೂ ತಾಯಿ ಸ್ಥಾನದಲ್ಲಿ ನಿಂತು ನನ್ನನ್ನು ಸಂತೈಸಿದ್ದೀರಿ. ಯಾರೂ ಹೊರಗಿನವರ ರೀತಿ ನಡೆದುಕೊಳ್ಳಲಿಲ್ಲ. ಕಣ್ಣೀರು ಹಾಕಬಾರದು ಎಂದುಕೊಂಡು ಇಲ್ಲಿಗೆ ಬಂದೆ. ಯಾಕೆಂದರೆ, ಸ್ಪಂದನಾಗೂ ಅದು ಇಷ್ಟ ಆಗುತ್ತಿರಲಿಲ್ಲ’ ಎಂದು ಹೇಳುತ್ತಾ ವಿಜಯ್ ರಾಘವೇಂದ್ರ ಭಾವುಕರಾಗಿ ಗಳಗಳನೆ ಅತ್ತರು.