70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಸಿನಿಮಾಗಳು ಶೈನ್ ಆಗಿವೆ. ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಈ ಸುದ್ದಿ ತಿಳಿದು ನಟ ‘ರಾಕಿಂಗ್ ಸ್ಟಾರ್’ ಯಶ್ ಅವರು ದೂರವಾಣಿ ಮೂಲಕ ರಿಷಬ್ ಶೆಟ್ಟಿಗೆ ಅಭಿನಂದನೆ ತಿಳಿಸಿದರು. ಆ ಬಗ್ಗೆ ರಿಷಬ್ ಮಾತನಾಡಿದ್ದಾರೆ. ‘ಯಶ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ತುಂಬ ದೊಡ್ಡ ಬೆಂಬಲ ನೀಡಿದ್ದರು. ಸಿನಿಮಾ ನೋಡಿ ನನಗೆ ವಿಶ್ ಮಾಡಿದ್ದರು. ಜನರಿಗೆ ಆ ಸಿನಿಮಾ ತಲುಪಲು ಅವರ ಕೊಡುಗೆ ಇತ್ತು. ಆ ಫೀಲಿಂಗ್ ಇಂದಿಗೂ ಅವರ ಮೇಲಿದೆ. ಇಂದು ಅವರು ಶೂಟಿಂಗ್ನಲ್ಲಿ ಇದ್ದರಂತೆ. ರಾಷ್ಟ್ರ ಪ್ರಶಸ್ತಿ ಬಂದ ತಕ್ಷಣ ಫೋನ್ ಮಾಡಿ ವಿಶ್ ಮಾಡಿದರು. ಖುಷಿ ಆಯಿತು, ತುಂಬ ಹೆಮ್ಮೆ ಎನಿಸುತ್ತಿದೆ ಅಂತ ಹೇಳಿದರು. ‘ಕೆಜಿಎಫ್ 2’ ಸಿನಿಮಾಗೆ ಪ್ರಶಸ್ತಿ ಬಂದಿದ್ದಕ್ಕೆ ನಾನು ಅವರಿಗೆ ವಿಶ್ ಮಾಡಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.