ಅರ್ಜುನ ಆನೆ ಸಮಾಧಿ ನಿರ್ಮಾಣಕ್ಕೆ ದರ್ಶನ್ ಅವರು ಮುಂದಾಗಿದ್ದು, ಧನಸಹಾಯ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅರಣ್ಯಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದರ್ಶನ್ ಆಪ್ತರಾದ ನಾಗರಾಜ್ ಮಾತನಾಡಿದ್ದಾರೆ. ‘ನಾನು ದರ್ಶನ್ ಅವರ ಸ್ನೇಹಿತ ನಾಗರಾಜ್. ದರ್ಶನ್ ಅವರ ಪರವಾಗಿ ಮಾತನಾಡುತ್ತಿದ್ದೇನೆ. ದರ್ಶನ್ ಅವರು ಅನಧಿಕೃತವಾಗಿ ಕಲ್ಲುಗಳನ್ನು ಮತ್ತು ಹುಡುಗರನ್ನು ಕಳಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದೀರಲ್ಲ.. ಮಾಧ್ಯಮಗಳಲ್ಲಿ ನೋಡಿ ಪ್ರಸಾರ ಆಗಿದೆ. ಮೇ 2ರಂದು ದರ್ಶನ್ ಅವರು ಅರ್ಜುನನ ಸಮಾಧಿ ಬಗ್ಗೆ ಒಂದು ಟ್ವೀಟ್ ಮಾಡಿದ್ದರು. ಆ ಬಳಿಕ ಸರ್ಕಾರ, ಅರಣ್ಯ ಇಲಾಖೆ, ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಮಾವುತ ವಿನು ಮತ್ತು ಹುಡುಗರು ಎಎಸ್ಎಫ್ ಅವರಿಗೆ ಮನವಿ ಮಾಡಿಕೊಂಡು ಅನುಮತಿ ಪಡೆದರು. ಆ ಬಳಿಕ ದರ್ಶನ್ ಅವರು ಹಣ ನೀಡಿ ನಮಗೆ ಕಲ್ಲುಗಳ ವ್ಯವಸ್ಥೆ ಮಾಡಿದರು. ಆ ಬಳಿಕವೇ ನಾವು ಕಾಡಿನ ಒಳಗೆ ಹೋಗಿದ್ದು. ಕೆಲಸ ಶುರುಮಾಡಿದಾಗ ಆರ್ಎಫ್ಓ ಅವರು ತಡೆದಿದ್ದೀರಿ. ಹಣ ವಾಪಸ್ ಕೊಟ್ಟಿದ್ದೇವೆ ಅಂತ ನೀವು ಹೇಳುತ್ತಿದ್ದೀರಿ. ಆದರೆ ಅದು ಯಾವ ಖಾತೆಗೂ ಬಂದಿಲ್ಲ. ಆ ಹಣದ ಅವಶ್ಯಕತೆ ದರ್ಶನ್ ಅವರಿಗೆ ಇಲ್ಲ. ತಾಯಿ ಚಾಮುಂಡೇಶ್ವರಿ ಅವರನ್ನು ಚೆನ್ನಾಗಿ ಇಟ್ಟಿದ್ದಾರೆ’ ಎಂದು ನಾಗರಾಜ್ ಹೇಳಿದ್ದಾರೆ.