ನಟ ಕಿಚ್ಚ ಸುದೀಪ್ ಅವರು ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿದ್ದಾರೆ. ಪತ್ನಿ ಪ್ರಿಯಾ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಸುದೀಪ್ ಬಂದಿರುವ ವಿಷಯ ತಿಳಿದು, ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ಬಾಸ್ ಬಾಸ್ ಕಿಚ್ಚ ಬಾಸ್..’ ಎಂದು ಜೈಕಾರ ಕೂಗುವ ಮೂಲಕ ಜನರು ಅಭಿಮಾನ ಪ್ರದರ್ಶಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅಭಿಮಾನಿಗಳ ಕಡೆಗೆ ಕೈ ಬೀಸಿ ಮುಂದೆ ಸಾಗಿದ್ದಾರೆ. ಕೆಲವೇ ದಿನಗಳ ಹಿಂದೆ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣವನ್ನು ಸುದೀಪ್ ಮುಗಿಸಿದ್ದಾರೆ. ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಖತ್ ಭರವಸೆ ಇದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ಹಲವು ತಿಂಗಳ ಕಾಲ ಚಿತ್ರೀಕರಣ ನಡೆದಿದ್ದು, ಇತ್ತೀಚೆಗೆ ಮುಕ್ತಾಯ ಆಗಿದೆ. ಆ ಸುದ್ದಿ ತಿಳಿಸಲು ಸುದೀಪ್ ಅವರು ಒಂದು ವಿಡಿಯೋ ಹಂಚಿಕೊಂಡಿದ್ದರು. 2022ರಲ್ಲಿ ತೆರೆಕಂಡ ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಅವರ ಬೇರೆ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ದೀರ್ಘ ಗ್ಯಾಪ್ ಆಗಿರುವ ಕಾರಣದಿಂದ ‘ಮ್ಯಾಕ್ಸ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಕಾತರ ಹೆಚ್ಚಾಗಿದೆ.