‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ದರ್ಶನ್​ ಕೇಸ್​ ಬಗ್ಗೆ ವಸಿಷ್ಠ ಸಿಂಹ ಪ್ರತಿಕ್ರಿಯೆ

ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರು ಕೊಲೆ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಿದ ಆರೋಪ ಇವರೆಲ್ಲರ ಮೇಲಿದೆ. ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನಟ ವಸಿಷ್ಠ ಸಿಂಹ ಕೂಡ ಮಾತನಾಡಿದ್ದಾರೆ. ‘ಎಲ್ಲರಿಗೂ ಅಭಿಪ್ರಾಯ ಇರುತ್ತದೆ. ಆದರೆ ವಿಚಾರಣೆಯ ಹಂತದಲ್ಲಿ ಇರುವಾಗ ನಾವು ಅಭಿಪ್ರಾಯಗಳನ್ನು ಹೇಳಿಕೊಳ್ಳುವುದು ನೈತಿಕತೆ ಅಲ್ಲ. ಪಾರದರ್ಶಕವಾಗಿ ತನಿಖೆ ಆಗಬೇಕು. ಸಮಾಜದಲ್ಲಿ ಯಾರೇ ಆಗಲಿ. ದೊಡ್ಡವರಾಗಲಿ, ಚಿಕ್ಕವರಾಗಲಿ.. ಕಾನೂನಿಗೆ ಹೊರತಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕೆಲವೊಂದಿಷ್ಟು ಘಟನೆಗಳು ಆಗಬಾರದು ಎನಿಸುತ್ತದೆ. ದುಃಖ ಆಗುತ್ತದೆ. ಕೆಲವೊಂದು ಕಡೆ ನಮಗೆ ಘಾಸಿ ಉಂಟಾಗುತ್ತದೆ. ಬದುಕು ಎಂದರೆ ಇಷ್ಟು ಮಾತ್ರ ಅಲ್ಲ. ಇದನ್ನು ಮೀರಿ ನಾವು ಬೆಳೆಯಬೇಕು’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.