ತರುಣ್ ಸುಧೀರ್ ನಿರ್ದೇಶನದ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ 100 ದಿನಗಳನ್ನು ಪೂರೈಸಿದೆ. ಇಂದು (ಮೇ 2) ಈ ಚಿತ್ರತಂಡದವರು ದಿಢೀರ್ ಸುದ್ದಿಗೋಷ್ಠಿ ಕರೆದರು. ಹಾಗಾದರೆ ‘ಕಾಟೇರ 2’ ಸಿನಿಮಾದ ಘೋಷಣೆ ಆಗಬಹುದಾ ಎಂದು ಕೆಲವರು ಊಹಿಸಿದ್ದುಂಟು. ಸಡನ್ ಸುದ್ದಿಗೋಷ್ಠಿಯಲ್ಲಿ ‘ಕಾಟೇರ’ ಚಿತ್ರದ ಸೀಕ್ವೆಲ್ ಬಗ್ಗೆ ಏನಾದರೂ ಅನೌನ್ಸ್ಮೆಂಟ್ ಆಗಬಹುದಾ ಎಂದು ಊಹಿಸಲಾಯಿತು. ಆದರೆ ಆ ಕುರಿತ ಪ್ರಶ್ನೆಗೆ ದರ್ಶನ್ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಕಾಟೇರ’ ಸಿನಿಮಾದಿಂದ ದರ್ಶನ್ ಅವರು ಭಾರಿ ಯಶಸ್ಸು ಪಡೆದುಕೊಂಡರು. ಆದರೆ ಅವರ ‘ಪಾರ್ಟ್ 2’ ಮಾಡಲು ಅವರು ಸಿದ್ಧರಿಲ್ಲ. ‘ನಾನು ಸೀಕ್ವೆಲ್ ಮಾಡುವುದಿಲ್ಲ. ಕಾಟೇರ ಅಲ್ಲಿಗೆ ಮುಗಿಯಿತು. ನನಗೆ ಸೀಕ್ವೆಲ್ ಇಷ್ಟವಿಲ್ಲ. ಗೆದ್ದ ಎತ್ತಿನ ಬಾಲ ಹಿಡಿಯಬಾರದು. ಕಾಟೇರ ಕಥೆಯನ್ನು ಇನ್ನೂ ಎಳೆಯಬಾರದು’ ಎಂದು ದರ್ಶನ್ ಹೇಳಿದ್ದಾರೆ.