ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ಗೆ ಹೋಗಿದ್ದು ಯಾಕೆ? ಸ್ವತಃ ಉತ್ತರಿಸಿದ ಚಿಕ್ಕಬಳ್ಳಾಪುರ ಶಾಸಕ

ಶಾಸಕ ಪ್ರದೀಪ್​ ಈಶ್ವರ್​ ಅವರು ಏನೇ ಮಾಡಿದರೂ ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತದೆ. ಹಾಗೆಯೇ ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ್ದು ಕೂಡ ಸಖತ್​ ಚರ್ಚೆ ಹುಟ್ಟು ಹಾಕಿತ್ತು. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋಗೆ ಅವರು ಸ್ಪರ್ಧಿಯಾಗಿ ತೆರಳಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಅದು ನಿಜವಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆಗಿರುವ ಪ್ರದೀಪ್​ ಈಶ್ವರ್​ ಅವರು ಬೇರೆಯದೇ ಉದ್ದೇಶ ಇಟ್ಟುಕೊಂಡು ದೊಡ್ಮನೆಗೆ ತೆರಳಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ. ‘ಬಿಗ್​ ಬಾಸ್​ ಎಂಬುದು ಒಂದು ದೊಡ್ಡ ವೇದಿಕೆ. ಕೇವಲ ಮೂರು ಗಂಟೆ ಮಾತ್ರ ನಾನು ಬರುತ್ತೇನೆ ಅಂತ ಅವರಿಗೆ ಹೇಳಿದ್ದೆ. ಕರುನಾಡಿನ ಯುವ ಜನರನ್ನು ಮೋಟಿವೇಟ್​ ಮಾಡಲು ನಾನು ಅಲ್ಲಿಗೆ ತೆರಳಿದ್ದೆ. ಚಿಕ್ಕ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡ ನಾನು ತಂದೆ-ತಾಯಿಯ ಮಹತ್ವವನ್ನು ತಿಳಿಸಿ ಹೇಳಲು ಬಿಗ್​ ಬಾಸ್​ಗೆ ಹೋದೆ’ ಎಂದು ಪ್ರದೀಪ್​ ಈಶ್ವರ್​ ಹೇಳಿದ್ದಾರೆ.